ಶನಿವಾರ, ಡಿಸೆಂಬರ್ 1, 2012

ನಿಕಾರಾಗುವದ ಒಂದು ಎತ್ತುಗೆ




ಚಿತ್ರ: ಗೂಗಲ್ಲಿಂದ


ನಿಕಾರಾಗುವದಲ್ಲಿ ೭೦-೮೦ರಲ್ಲಿ ಆದ ಒಂದು ಬೆಳವಣಿಗೆಯ ಬಗ್ಗೆ ಹೇಳುತ್ತೇನೆ. ೭೦ರ ಹೊತ್ತಲ್ಲಿ ಅಲ್ಲಿ ಕಿವುಡು-ಮೂಗು ಮಕ್ಕಳಿಗಾಗಿ ಶಾಲೆಯೊಂದು  ತೆರೆಯಲಾಯಿತು. ಇದಕ್ಕೂ ಮೊದಲು ಇಂತಹ ಮಕ್ಕಗಳಿಗೆಂದು ಶಾಲೆಗಳು ಇರಲಿಲ್ಲ. ಅಲ್ಲಿ ಅವರುಗಳಿಗೆ ಸ್ಪ್ಯಾನಿಶ್ ನುಡಿಯನ್ನೂ ಮತ್ತು ತುಟಿಯೋದುವುದನ್ನೂ (lip reading) ಕಲಿಸಲಾಗುತ್ತಿತ್ತು. ಆದರೆ ಹತ್ತು-ಹನ್ನೆರಡು ವರ್ಶಗಳಾದರೂ ಅಲ್ಲಿನ ಮಕ್ಕಳು ಸ್ಪ್ಯಾನಿಶ್ ನುಡಿಯನ್ನು ಸರಿಯಾಗಿ ಕಲಿಯಲೇ ಇಲ್ಲ. ಅಲ್ಲಿನ ಕಲಿಸುವವರು ಈ ಮಕ್ಕಳಿಗೆ ಕಲಿಸಲು ಆಗುವುದಿಲ್ಲವೆಂದು ಕಯ್ ಚೆಲ್ಲಿ ಕೂತರು. ಅದಲ್ಲದೇ ಈ ಮಕ್ಕಳು ತಮ್ಮ ತಮ್ಮಲ್ಲೇ ಸಯ್ಗೆಗಳೊಂದಿಗೆ ಮಾತಾಡಿಕೊಳ್ಳುತ್ತಿದ್ದರು. ಇದೇನೋ ಕೆಲಸಕ್ಕೆ ಬಾರದ ಮೂಗರ ಸಯ್ಗೆಗಳೆಂದು ಮೊದಲಿಗೆ ಅಸಡ್ಡೆ ತೋರಿದ ಕಲಿಸುಗರು, ಮಕ್ಕಳಿಗೆ ಕಲಿಸಲೂ ಆಗದೇ ತಮ್ಮ ತಮ್ಮಲ್ಲೇ ಅದೇನು ಮಾತಾಡಿಕೊಳ್ಳುತ್ತಿದ್ದಾರೆಂಬುದನ್ನು ತಿಳಿಯಲೂ ಆಗದೆ ಅಮೇರಿಕಾದ ಯುನಿವರ್ಸಿಟಿಗಳಿಂದ ನೆರವು ಕೋರಿದರು.

ಅಮೆರಿಕಾದಿಂದ ಬಂದ ನುಡಿಯರಿಗರು (linguists) ಮಕ್ಕಳ ಸಯ್ಗೆಗಳನ್ನು ಗಮಿನಿಸ ತೊಡಗಿದರು ಮತ್ತು ಅದರ ಬಗ್ಗೆ ಆರಯ್ಕೆ (research) ನಡೆಸಿದರು. ಆ ಶಾಲೆಯ ದೊಡ್ಡ ಮಕ್ಕಳ (೧೧-೧೫ ವಯಸ್ಸಿನವರು) ಸಯ್ಗೆಗಳನ್ನ ಗಮನಿಸಿದ ತಂಡ ಬೆರಗಾಯಿತು. ಈ ಮಕ್ಕಳು ತಮ್ಮೊಂದಿಗೆ ಸಯ್ಗೆಗಳ  ಮೂಲಕ ಮಾತಾಡಿಕೊಂಡು ತಮ್ಮದೇ ಆದ ನುಡಿಯನ್ನು ಮಾಡಿಕೊಂಡು ಬಿಟ್ಟಿದ್ದರು! ಆದರೆ ಈ ನುಡಿಯು ಅರೆ-ಬರೆ ನುಡಿಯಾಗಿತ್ತು, ಪಿಜಿನ್ ಎಂದು ಹೇಳಬಹುದಿತ್ತು ಅಶ್ಟೆ. ಆದರೂ ಬರೀ ೧೦-೧೫ ವರ್ಶಗಳಲ್ಲಿ ಮಕ್ಕಳು ತಾವಾಗೆ ಇಂತಹ ಒಂದು ನುಡಿಯನ್ನು ಮಾಡಿಕೊಂಡಿದ್ದರು ಎಂದರೆ ಏನಾಶ್ಚರ್ಯ ಅಲ್ಲವೇ? ಆದರೆ ಇನ್ನೂ ಚಿಕ್ಕ ಮಕ್ಕಳ ಸಯ್ಗೆಗಳನ್ನು ಆರಯ್ಯಲು ಹೊರಟ ಈ ತಂಡಕ್ಕೆ ಮತ್ತೊಂದು ದೊಡ್ಡ ಆಶ್ಚರ್ಯ ಕಾದಿತ್ತು.

ಈ ಚಿಕ್ಕ ಮಕ್ಕಳು ದೊಡ್ಡ ಮಕ್ಕಳಿಂದ ಕಲಿತ ನುಡಿಯನ್ನು ಮುಂದುವರೆಸಿ ಅದನ್ನು ಒಂದು ತುಂಬು ನುಡಿಯನ್ನಾಗಿಸಿದ್ದರು. ಎಶ್ಟರ ಮಟ್ಟಿಗೆ ಎಂದು ಕೇಳುತ್ತೀರಾ? ಸಾವಿರ್ರಾರು ವರ್ಶಗಳಿಂದ ಬೆಳೆದು ಬಂದ ನುಡಿಗಳಲ್ಲಿ ಕಾಣುವ ಸೊಲ್ಲಿರಿಮೆಯ (ವ್ಯಾಕರಣ) ಸಂಕೀರ್ಣತೆ ಈ ಪುಟ್ಟ ಮಕ್ಕಳ ಸಯ್ಗೆಯ ನುಡಿಯ ಸೊಲ್ಲರಿಮೆಯಲ್ಲೂ ಕಂಡಿತು! ಈ ಕಂಡುಹಿಡಿತವು ಪ್ರಪಂಚದ ಎಲ್ಲ ನುಡಿಯರಿಗರನ್ನು ಬೆರಗುಗೊಳಿಸಿತ್ತು.  ನುಡಿಯ ಹುಟ್ಟು ಮತ್ತು ಬೆಳವಣಿಗೆಯ ಬಗ್ಗೆ, ಅರಿಮೆಯ ಸಮುದಾಯದಲ್ಲೇ (ಸೈಂಟಿಫಿಕ್ ಕಮ್ಯೂನಿಟಿ), ಅಂದಿನವರೆಗೂ ಇದ್ದ ಎಶ್ಟೋ ನಂಬಿಕೆಗಳು ಬಿದ್ದು ಹೋದವು.

ಇದರಿಂದ ನಾವೇನು ತಿಳಿಯಬಹುದು? ಮನುಶ್ಯನಿಗೆ ತನ್ನ ಒಡನಾಡಿಗಳೊಂದಿಗೆ ಒಡನಾಡಲು, ಮಾತಾಡಲು ಬೇಕಾಗುವ ನುಡಿಯ ಸೊಲ್ಲರಿಮೆಯೆಂಬುದು ಹುಟ್ಟು ಗುಣ. ಆ ಸೊಲ್ಲರಿಮೆ ಅವನ ಮೆದುಳಿನಲ್ಲಿ ಹುಟ್ಟುವಾಗಲೇ ಇರುತ್ತದೆ. ಚಿಕ್ಕ ಮಗುವೊಂದು ತನ್ನ ತಾಯಿ ತಂದೆ, ಇನ್ನಿತರ ನಂಟರು ಮಾತಾಡುವುದನ್ನು ನೋಡಿ ಅವರ ನುಡಿಯ ಸೊಲ್ಲರಿಮೆಯನ್ನು ತಿಳಿದು ತನ್ನ ಮೆದುಳಿನಲ್ಲಿರುವ ಸೊಲ್ಲರಿಮೆಗೆ ಹೊಂದಿಸಿಕೊಳ್ಳುತ್ತದೆ. ಹೀಗೆ ತನ್ನ ತಾಯ್ನುಡಿಯನ್ನು ಕಲಿಯುತ್ತದೆ. ಅಶ್ಟೇ ಅಲ್ಲದೆ, ನುಡಿಯೊಂದು ಕಿವಿಗೆ ಬೀಳದಿದ್ದಲ್ಲಿ ತನ್ನದೇ ಹೊಸ ನುಡಿಯೊಂದನ್ನು ಕಟ್ಟುವ ಕಸುವು ಕೂಡ ಒಂದು ಪುಟ್ಟ ಮಗುವಿಗೆ ಇರುತ್ತದೆ. ಇದಕ್ಕೆ ಕಾರಣ, ಮೇಲೆ ಹೇಳಿದಂತೆ, ಮನುಶ್ಯನ ಮೆದುಳಲ್ಲಿ ಹುಟ್ಟಿನಿಂದಲೇ ಬರುವ ಸೊಲ್ಲರಿಮೆ. 

ಆದರೆ ಇದರ ವಿಚಾರವಾಗಿ ಇಂದಿಗೂ ನಮ್ಮಲ್ಲಿ ಹಲವು ತಪ್ಪು ನಂಬಿಕೆಗಳಿವೆ. ಬಯ್ಬಲ್ಲಿನಲ್ಲಿ ಮೊದಲು ಒಂದೇ ನುಡಿಯಿದ್ದು ಆಮೇಲೆ ಅಲ್ಲಿಂದ ಎಲ್ಲಾ ನುಡಿಗಳು ಹುಟ್ಟಿಕೊಂಡವು (ಬೇಬಲ್ ಟವರ್ ಕತೆ) ಎಂದು ಹೇಳಲಾಗಿದೆ. ನಮ್ಮ ದೇಶದಲ್ಲಿ ಸಕ್ಕದವೇ ಎಲ್ಲ ನುಡಿಗಳಿಗೂ ಮೂಲ ಎಂಬ ನಂಬಿಕೆಯೂ ಇದೆ. ಹಾಗೆಯೇ ದ್ರಾವಿಡ ಚಳುವಳಿಯ ಕೆಲವು ಪಂಡಿತರುಗಳು, ಸಕ್ಕದ ಪಂಡಿತರುಗಳನ್ನು ನೋಡಿಕೊಂಡು, ತಾವೇನು ಕಮ್ಮಿ ಎಂದು, ತಮಿಳೇ ಎಲ್ಲ ನುಡಿಗಳ ಮೂಲ ಎಂದು ವಾದಿಸಿದ್ದೂ ಇದೆ. ಈ ನಿಲುವುಗಳನ್ನು, ನಂಬಿಕೆಗಳನ್ನು ಆಳವಾಗಿ ನಂಬುವವರು ತುಂಬಾ ಮಂದಿಯುಂಟು. ಆದರೆ ನಿಜಕ್ಕೂ ನುಡಿಯ ಮೂಲ ಇರುವುದು ಮನುಶ್ಯನ ಮೆದುಳಲ್ಲಿ. ಹುಟ್ಟಿದ ಕರುವಿಗೆ ತಾಯಿಯ ಕೆಚ್ಚಲಿಂದ ಹಾಲು ಕುಡಿಯುವುದು ಹೇಳಿಕೊಡಬೇಕಾಗಿಲ್ಲ. ಹಾಗೇ ಮನುಶ್ಯನಿಗೆ ನುಡಿಯ ಸೊಲ್ಲರಿಮೆ ಹೇಳಿಕೊಡ ಬೇಕಾಗಿಲ್ಲ. ತನ್ನ ಪರಿಸರದ ಸದ್ದುಗಳನ್ನು ಕೇಳಿ ಅದನ್ನು ಬಳಸಿಕೊಂಡು ನುಡಿಯನ್ನು ಕಟ್ಟುವ ಕಸುವು ಮನುಶ್ಯನಲ್ಲೇ ಇರುತ್ತದೆ. ಸದ್ದುಗಳನ್ನು ಕೇಳಲಾಗದ ಕಿವುಡನಾಗಿದ್ದರೆ ಸಯ್ಗೆಗಳೇ ಸಾಕು. ದೇವರು ಕೊಟ್ಟ ನುಡಿಯೋ, ಇಲ್ಲ ಬೇರೆ ಇನ್ನಾವುದೋ ಮೂಲ ನುಡಿ ಇರಲೇ ಬೇಕೆಂದೇನೂ ಇಲ್ಲ.
 

ಶನಿವಾರ, ಅಕ್ಟೋಬರ್ 27, 2012

ಚಿಮೂ ಅವರ ವಾದಕ್ಕೆ ಎದುರು ವಾದ

ಚಿದಾನಂದಮೂರ್ತಿಗಳ 'ಕನ್ನಡ ಲಿಪಿ ಸಂಸ್ಕರಣೆ ಅನಗತ್ಯ ಮತ್ತು ಅಸಾದ್ಯ' ಎಂಬ ತಲೆಬರಹದಲ್ಲಿ ಜೂನಿನಲ್ಲಿ ವಿ.ಕ ದಲ್ಲಿ ಒಂದು ಬರಹ ಬಂದಿತ್ತು. ಅದರ ಎದುರಾಗಿ ಈಗಾಗಲೇ ಬರತ್ ಅವರು ಬ್ಲಾಗಿದ್ದಾರೆ. ತಡವಾದರೂ ಸರಿ ನನ್ನ ಅನಿಸಿಕೆ ಈಗ ಹೇಳುತ್ತಿರುವೆ:



ಚಿದಾನಂದಮೂರ್ತಿಗಳು ತಮ್ಮ ಬರಹದಲ್ಲಿ ಮೊದಲನೆಯದಾಗಿ ಇಂಗ್ಲೀಶ್ ಲಿಪಿ ಸುದಾರಣೆಯ ಪ್ರಯತ್ನಗಳ ಉದಾಹರಣೆಯನ್ನು ನೀಡಿದ್ದಾರೆ. ಬೇರೆ ನುಡಿಯಿಂದ ಪದ ಪಡೆಯುವಾಗ ಅದರ ಸ್ಪೆಲ್ಲಿಂಗನ್ನು ತಮ್ಮ ನುಡಿಗೆ ಹೊಂದಿಸದೆ ಆ ನುಡಿಯ ಸ್ಪೆಲ್ಲಿಂಗನ್ನೇ ಉಳಿಸಿಕೊಳ್ಳಬೇಕೆಂಬ ಕಟ್ಟಲೆ ಇಂಗ್ಲೀಶಲ್ಲಿದೆ. ಇದರಿಂದ ಪ್ರೆಂಚ್, ಜರ್ಮನ್, ಲ್ಯಾಟಿನ್, ಪೋಲಿಶ್ ಮುಂತಾದ ಹಲವು ನುಡಿಗಳಿಂದ ಬಂದ ಸ್ಪೆಲ್ಲಿಂಗುಗಳು ಇಂಗ್ಲೀಶಲ್ಲಿ ಹಾಗೆಯೇ ಉಳಿದಿವೆ. ಒಂದೇ ಬಗೆಯ ಉಚ್ಚಾರವಿದ್ದರೂ ಪದಗಳು ಯಾವ ಮೂಲದ್ದು ಎಂಬುದರ ಮೇಲೆ ಸ್ಪೆಲ್ಲಿಂಗ್ ಬೇರೆಯಾಗುತ್ತದೆ. ಮೊದಲು ಹೆಚ್ಚು ಕಡಿಮೆ ಎಲ್ಲ ಯೂರೋಪಿನ ನುಡಿಗಳಿಂದ ಪದಗಳನ್ನು ಪಡೆದು ತೀರಾ ಸಂಕೀರ್ಣವಾದ ಸ್ಪೆಲ್ಲಿಂಗ್ ತೊಡಕುಗಳನ್ನು ಹೊಂದಿದ್ದ ಇಂಗ್ಲೀಶಲ್ಲಿ ಈಗ ಜಗತ್ತಿನ ಸುಮಾರು ಎಲ್ಲ ನುಡಿಗಳಿಂದ ಪದಗಳು ಸೇರಿಕೊಂಡು ಸರಿ ಪಡಿಸಲಾಗದಶ್ಟು ಸಮಸ್ಯೆಗಳು ಮೂಡಿವೆ. ಉದಾಹರಣೆಗೆ 'ಊ' ಎಂಬ ಉಲಿಯನ್ನು oo, u, u-e, ui, ue, o, oe, o-e, o-b, ou, ough, ew (f'oo'd, tr'u'th, r'ude', fr'ui't, bl'ue', t'o', sh'oe', m'ove', t'omb', gr'ou'p, thr'ough', fl'ew') ಎಂದು ಹನ್ನೆರಡು ಬಗೆಯಲ್ಲಿ ಬರೆಯಬಹುದಲ್ಲದೆ ಇದೇ ಸ್ಪೆಲ್ಲಿಂಗುಗಳು ಬೇರೆ ಪದಗಳಲ್ಲಿ ಬಂದಾಗ ಅವು ಬೇರೆ ಉಚ್ಚಾರಗಳನ್ನು ಪಡೆಯಬಹುದಾಗಿರುತ್ತವೆ (fl'oo'd, r'u'b, b'ui'ld, g'o', t'oe', dr'ove', c'om'b, 'ou't, r'ough', s'ew' - ಮೂಲ: ವಿಕಿಪೀಡಿಯ)

ಹೀಗಾಗಿ ಇಂಗ್ಲೀಶಿನ ಲಿಪಿ ಸುದಾರಣೆಗೆ ಮುಕ್ಯವಾಗಿ ಅಡ್ಡವಾಗಿರುವುದು ಇಂತಹ ಸಂಕೀರ್ಣ ಸ್ಪೆಲ್ಲಿಂಗ್ ಪದ್ದತಿಯನ್ನು ಕಲಿತವರು ಅದನ್ನು ಮರೆತು (unlearn) ಹೊಸ ಸುದಾರಿಸಿದ ಲಿಪಿಯನ್ನು ಕಲಿಯುವುದೇ ಆಗಿದೆ. ಆದರೆ ಕನ್ನಡದ ವಿಶಯವಾಗಿ ಸಂಸ್ಕ್ರುತ ಪದಗಳನ್ನು ಬಿಟ್ಟರೆ ಬೇರೆ ನುಡಿಗಳಿಂದ ಬಂದ ಪದಗಳಿಗೆ ಆ ನುಡಿಯಲ್ಲಿ ಬರೆದಂತೆಯೇ ಬರೆಯ ಬೇಕೆಂಬ ಕಟ್ಟಲೆಯಿಲ್ಲ. ಕನ್ನಡದ ಲಿಪಿ phonetic ಆಗಿರುವುದರಿಂದ ಸಂಸ್ಕ್ರುತ ಪದಗಳನ್ನು ಸಂಸ್ಕ್ರುತದಲ್ಲಿದ್ದ ಹಾಗೆಯೇ ಬರೆಯುವುದಕ್ಕಿಂತ ಕನ್ನಡದಲ್ಲಿ ಉಲಿಯುವಂತೆ ಬರೆಯುವುದೇ ಇನ್ನೂ ಸುಲಬ. ಹಾಗಾಗಿ ಶಂಕರ ಬಟ್ಟರು ಹೇಳಿರುವ ಲಿಪಿ ಸುದಾರಣೆ ಕನ್ನಡ ಬರಹವನ್ನು ಸುಲಬವಾಗಿಸುತ್ತದೆ ಮತ್ತು ಇಂಗ್ಲೀಶಿನಲ್ಲಾಗುವಂತೆ ಹೊಸ ಸಮಸ್ಯೆಗಳು ಏಳುವುದಿಲ್ಲ. ಇಂಗ್ಲೀಶಿನ ಲಿಪಿ ಸುದಾರಣೆಗೆ ಮತ್ತೊಂದು ದೊಡ್ಡ ತೊಡಕೇನೆಂದರೆ ಅದರಲ್ಲಿ ಸುಮಾರು (ಬೇರೆ ಬೇರೆ ಒಳನುಡಿಗಳಿಗೆ ತಕ್ಕಂತೆ) ೨೪ರಿಂದ ೨೭ ವ್ಯ್ರಂಜನಗಳು ಮತ್ತು ೧೪ ರಿಂದ ೨೦ ಸ್ವರಗಳು ಇವೆ. ಆದರೆ ವರ್ಣಮಾಲೆಯಲ್ಲಿರುವುದು ಬರಿಯ ೨೬ ಅಕ್ಶರಗಳು. ಈಗಿರುವ ೨೬ರ ಜೊತೆ ಇನ್ನೂ ೨೧ ಹೆಚ್ಚು ಅಕ್ಶರಗಳನ್ನು ಕಲಿಯಬೇಕೆಂದರೆ ಅದು ಕಶ್ಟದ ಕೆಲಸವೇ ಸರಿ. ಆದರೆ ಈ ತೆರನಾದ ಅಕ್ಶರ ಕೊರತೆಯ ತೊಂದರೆಯೂ ಕನ್ನಡಕ್ಕೆ ಇಲ್ಲ. 

ಮಹಾಪ್ರಾಣಗಳ ವಿಶಯಕ್ಕೆ ಬಂದಾಗ 'ದನವಂತ'ದ ಉದಾಹರಣೆಯನ್ನು ಕೊಟ್ಟು ಪದದ ಹುರುಳೇ ಬೇರೆಯಾಗುತ್ತದೆ ಎಂದಿದ್ದಾರೆ. ಆದರೆ ಕನ್ನಡದ ಆಡು ಮಾತಲ್ಲಿ ಮಹಾಪ್ರಾಣಗಳು (ಬೆರೆಳೆಣಿಕೆಯಶ್ಟು ಹೊರಪಡಿಕೆಗಳು ಬಿಟ್ಟು) ನಿಜಕ್ಕೂ ಇಲ್ಲ. ಮಾತಿನಲ್ಲಿ 'ದನವಂತ' ಎಂದೇ ಉಲಿಯುವ ನಮಗೆ ಮಾತಾಡುವಾಗ ಯಾವುದೇ ಗೊಂದಲವಾಗುವುದಿಲ್ಲ. ಮಾತಲ್ಲಿ ಕಾಣದ ಗೊಂದಲ ಬರಹದಲ್ಲಿ ಮಾತ್ರ ಹೇಗೆ ಮೂಡುತ್ತದೆ? ಅಲ್ಲದೇ ಒಂದು ಪದಕ್ಕೆ ಒಂದೇ ನುಡಿಯಲ್ಲಿ ಹಲವು ಹುರುಳುಗಳಿರುತ್ತವೆ. ಮಾತಿನ ಸಂದರ್ಬಕ್ಕೆ ತಕ್ಕಂತೆ ಪದಗಳ ಹುರುಳು ತಿಳಿಯಬಹುದು. ಇನ್ನು 'ಪಂಪ ಭಾರತ' ಮುಂತಾದ ಹಳೆಯ ಸಾಹಿತ್ಯದಲ್ಲಿ ಬರುವ ಮಹಾಪ್ರಾಣಗಳನ್ನಾಗಲಿ ಇನ್ನಾವುದೆ ಅಕ್ಶರಗಳನ್ನಾಗಲಿ ಮಾರ್ಪಡಿಸುವ ಅಗತ್ಯವಿಲ್ಲ. ಹೇಗೆ ಹಳೆಗನ್ನಡದಲ್ಲಿರುವ 'ಱ', '' ಅಕ್ಶರಗಳನ್ನು ಪ್ರೌಡ ಶಾಲೆಯಲ್ಲಿ ಕಲಿತು ಓದುತ್ತೇವೆಯೋ ಹಾಗೆಯೇ ಕಲಿತು ಓದಬಹುದು.

ಅಪ್ಪಟ ಕನ್ನಡದಲ್ಲಿ ಚಿಂತನೆ-ಬಾವನೆಗಳನ್ನು ಹೇಳಲೇ ಆಗದೆಂಬ ಅವರ ಮಾತೂ ಸರಿಯಲ್ಲ. ಪ್ರಪಂಚದ ಯಾವುದೇ ನುಡಿಯಲ್ಲಾದರೂ ಯಾವುದೇ ಚಿಂತನೆ-ಬಾವನೆಗಳನ್ನು ಹೇಳಬಹುದು. ಒಂದು ನುಡಿಯನ್ನಾಡುವ ಜನಾಂಗದ ಸಮಾಜ ಬದಲಾವಣೆಗಳನ್ನು ಕಂಡಂತೆ  ಹೊಸ ಪರಿಕಲ್ಪನೆಗಳು, ಚಿಂತನೆಗಳು, ಬಾವನೆಗಳು ಮತ್ತು ವಸ್ತುಗಳು ಹುಟ್ಟಿಕೊಳ್ಳುತ್ತವೆ ಮತ್ತು ಅವುಗಳನ್ನು ಆ ಜನಾಂಗದ ನುಡಿಯಲ್ಲಿ ಹೇಳುವ ಅಗತ್ಯ ಉಂಟಾಗುತ್ತದೆ. ಈ ಅಗತ್ಯ ತೀರಿಸಲು ಬೇರೆ ನುಡಿಗಳಿಂದ ಹೊಸ ಪದಗಳನ್ನು ಎರವಲು ಪಡೆಯಬಹುದು ಇಲ್ಲವೇ ಅದೇ ನುಡಿಯಲ್ಲೇ ಕಟ್ಟಲೂ ಬಹುದು. ಉದಾಹರಣೆಗೆ ವ್ಯಾಕರಣದ ಪರಿಕಲ್ಪನೆ ಸಂಸ್ಕ್ರುತದಲ್ಲಿ ಇಲ್ಲದಿದ್ದಾಗ 'ವ್ಯಂಜನ' ಪದಕ್ಕೆ 'ಅಲಂಕಾರದ ವಸ್ತು' ಎಂಬ ಹುರುಳು ಇತ್ತು. ವ್ಯಾಕರಣದ ಚಿಂತನೆ ಮೊದಲು ಮಾಡಿದಾಗ 'Consonant' ಎಂಬುದಕ್ಕೆ, ಸ್ವರವನ್ನು ಅಲಂಕರಿಸುವ ಕೆಲಸ ಮಾಡುತ್ತದೆ ಎಂಬ ಬಾವನೆಯಿಂದ, 'ವ್ಯಂಜನ' ಪದವನ್ನು ಆರಿಸಿಕೊಳ್ಳಲಾಯಿತು. ಕನ್ನಡ ಸಾಹಿತ್ಯ ಬೆಳೆಯುವ ಹೊತ್ತಿಗೆ 'ವ್ಯಂಜನ' ಪದ ಸಂಸ್ಕ್ರುತದಲ್ಲಿ ಆಗಲೇ ಇದ್ದುದರಿಂದ ಅದನ್ನೇ ಬಳಸಲಾಯಿತು. ಆದರೆ ಇಂತಹ ಪದವನ್ನು ಕನ್ನಡದಲ್ಲೂ ಕಟ್ಟಬಹುದು. ಶಂಕರ ಬಟ್ಟರು 'ತಡೆಯುಲಿ' (ಇದನ್ನು ಉಲಿಯುವಾಗ ಉಸಿರನ್ನು ತಡೆಯ ಬೇಕಾಗುತ್ತದೆ) ಎಂಬ ಪದವನ್ನು ಕಟ್ಟಿದ್ದಾರೆ.  ಇಂದಿನ ಅರಿಮೆಯ (ವಿಜ್ಞಾನ) ಚಿಂತನೆಗೂ ಸಂಸ್ಕ್ರುತದಲ್ಲಿ ಪದಗಳು ಇರಲಿಲ್ಲ / ಇಲ್ಲ. ಆದರೆ ಇರುವ ಪದಗಳನ್ನೇ ಬಳಸಿ ಕಟ್ಟಬಹುದು. 'Chlorophyl' ಪದಕ್ಕೆ ಸಂಸ್ಕ್ರುತದಲ್ಲಿ 'ಪತ್ರಹರಿತ್ತು' ಎಂಬ ಪದವನ್ನು ಕಟ್ಟಲಾಗಿದೆ. ಕನ್ನಡದಲ್ಲಿ 'ಕ್ಲೋರೊಪಿಲ್', 'ಪತ್ರಹರಿತ್ತು' ಪದಗಳಲ್ಲೊಂದನ್ನು ಎರವಲಾಗಿ ಪಡೆದು ಬಳಸಬಹುದು ಇಲ್ಲವೇ ಕನ್ನಡದಲ್ಲೇ 'ಎಲೆಹಸಿರು' ಎಂಬಂತಹ ಪದವನ್ನು ಕಟ್ಟಿಕೊಂಡು ಬಳಸಬಹುದು. ಹೀಗೆ ಯಾವುದೇ ನುಡಿಯಲ್ಲೂ ಈ ತೆರನಾದ ಪದಗಳನ್ನು ಕಟ್ಟಬಹುದು. ಹಾಗೆಂದು ನಮ್ಮಲ್ಲಿರುವ ಎಲ್ಲ ಬೇರೆ ನುಡಿಗಳ ಪದಗಳನ್ನು ಕಿತ್ತೊಗೆಯಬೇಕೆಂದಲ್ಲ. ಆದರೆ ಸಂಸ್ಕ್ರುತವಿಲ್ಲದೆ ಕನ್ನಡ ನುಡಿಗೆ ಕಸುವಿಲ್ಲವೆಂಬ ವಾದವನ್ನು ಆಳವಾಗಿ ನಂಬಿರುವ ಕನ್ನಡ ಸಮಾಜ ಇದು ಬರಿಯ ಹುಸಿನಂಬಿಕೆಯಶ್ಟೆ ಎಂಬುದನ್ನು ಅರಿಯಬೇಕಿದೆ.

'ಬಾಶೆ ಬೆಳೆಯಬೇಕಾದರೆ ಅದು ಮುಕ್ತವಾಗಿ ಅನ್ಯ ಬಾಶೆಗಳಿಂದ ಸ್ವೀಕರಿಸಬೇಕು' ಎಂಬ ಅವರ ಮಾತು ಒಪ್ಪುವಂತಹದ್ದೇ. ಅದರ ಉದಾಹಾರಣೆಯಾಗಿ 'ಟಿಕೆಟ್ಟು' ಎಂಬ ಇಂಗ್ಲೀಶಿಂದ ಬಂದ ಪದವನ್ನು ಕೊಟ್ಟಿದ್ದಾರೆ. ಆದರೆ ಈ ಪದದಲ್ಲಿ ನಾವು ಬಳಸುವ ಟ-ಕಾರ ಇಂಗ್ಲೀಶಲ್ಲಿ ಇಲ್ಲ. ಆ ಉಲಿ ಟ-ಕಾರಕ್ಕೆ ಹತ್ತಿರವಾದ್ದೇ ಹೊರತು ಟ-ಕಾರವಲ್ಲ. ನಮ್ಮ ನುಡಿಗೆ ಅದನ್ನು ತರುವಾಗ ನಮಗೆ ಹೊಂದುವಂತೆ ಟ-ಕಾರವಾಗಿ ಮಾರ್ಪಡಿಸಿಕೊಂಡಿದ್ದೇವೆ. ಇದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಆದರೆ 'ರುಶಿ', 'ದುಕ್ಕ', 'ಬಾವನೆ' ಎಂದು ಉಲಿಯುವ ಕನ್ನಡಿಗರು ಬರೆಯುವಾಗ ಮಾತ್ರ ಸಂಸ್ಕ್ರುತದಲ್ಲಿರುವಂತೆ 'ಋಷಿ', 'ದುಃಖ', 'ಭಾವನೆ' ಎಂದೇ ಬರೆಯಬೇಕೆಂಬ ವಾದ ವಿಚಿತ್ರವೆನಿಸುತ್ತದೆ. ಎಶ್ಟೋ ಪಂಡಿತರುಗಳಿಗೇ ವಿಸರ್ಗ ಮತ್ತು ಹ-ಕಾರಗಳ ನಡುವಿನ ಬೇರೆತನ ಗೊತ್ತಿಲ್ಲ. ಮಾತಲ್ಲಿ 'ನಮಹ', 'ಶಾಂತಿಹಿ' ಎಂದು ಉಲಿದು, ಬರೆಯುವಾಗ 'ನಮಃ', 'ಶಾಂತಿಃ' ಎಂದು ಬರೆಯುತ್ತಾರೆ. ಇದೇಕೆ ಹೀಗೆ ಎಂಬ ಕಾರಣ ಗೊತ್ತಿಲ್ಲದಿದ್ದರೂ ಅದೇ ಸರಿ ಎಂದು ವಾದಿಸುತ್ತಾರೆ.

ಕನ್ನಡ ಲಿಪಿಯ ಆಕಾರ ಬದಲಾದರೂ ಲಿಪಿ ವ್ಯವಸ್ತೆ ಇತಿಹಾಸದ ಉದ್ದಕ್ಕೂ ಒಂದೇ ಆಗಿದೆ ಎಂಬ ಮಾತೂ ಸರಿಯಲ್ಲ. ಮೊದಲೇ ಹೇಳಿದಂತೆ 'ಱ', 'ೞ' ಗಳು ಮಾತಲ್ಲಿ ಮಾಯವಾದಂತೆ ಲಿಪಿಯಲ್ಲೂ ಮಾಯವಾಗಿವೆ. ಸಂಸ್ಕ್ರುತದಿಂದಲೇ ಬಂದ ಜಿಹ್ವಾಮೂಲೀಯ ಮತ್ತು ಉಪದ್ಮಾನೀಯ ಎಂಬ ಯೋಗವಾಹಗಳನ್ನು, ಲ-ಕಾರದ ಎರಡು ಸ್ವರಗಳನ್ನು (ಕನ್ನಡದಿಂದ ಬೆಳೆದು ಬಂದ ತೆಲುಗು ಲಿಪಿಯಲ್ಲಿ ಇವನ್ನು ಇನ್ನೂ ಉಳಿಸಿಕೊಳ್ಳಲಾಗಿದೆ) ಕಯ್ ಬಿಡಲಾಗಿದೆ. ಹಾಗೆಯೇ ಬಳಕೆಯಲ್ಲಿಲ್ಲದ 'ಋ', 'ಷ', ಮಹಾಪ್ರಾಣ ಮುಂತದುವುಗಳನ್ನು ಕಯ್ ಬಿಡುವುದೇ ಲೇಸು.

ಮೂರ್ತಿಗಳಂತಹ ನಾಡಿನ ಹಿರಿಯರು ಒಪ್ಪದಿದ್ದರೂ ಸಾಮಾನ್ಯ ಮಂದಿ ಕೆಲವರು ಶಂಕರ ಬಟ್ಟರ ಬರಹಗಳನ್ನು ಮೆಚ್ಚಿ ವಿ.ಕ.ಕ್ಕೆ ಓಲೆಗಳನ್ನು ಬರೆದಿರುವುದು ನಲಿವಿನ ಸಂಗತಿ. ಆದರೆ ಸುದ್ದಿ ಪತ್ರಿಕೆಗಳಿಗಿಂತ ನಡುಬಲೆಯಲ್ಲಿ (Internet) ಶಂಕರ ಬಟ್ಟರ ವಾದ ಕನ್ನಡದ ಯುವಕರಲ್ಲಿ ಸಾಕಶ್ಟು ಹುರುಪು ತುಂಬಿದ ಚಟುವಟಿಕೆಗಳಿಗೆ ಕಾರಣವಾಗಿದೆ. ಬ್ಲಾಗುಗಳಲ್ಲಿ ಮತ್ತು ಪೇಸ್ಬುಕ್ಕಿನಂತಹ ತಾಣಗಳಲ್ಲಿ ಈಗಾಗಲೇ ಬಹಳಶ್ಟು ಚರ್ಚೆಗಳು ನಡೆದಿವೆ / ನಡೆಯುತ್ತಲಿವೆ. ಕನ್ನಡದ ಸೊಗಡು, ಪದಗಳ ಇಟ್ಟಳ ಮತ್ತು ಸೊಲ್ಲರಿಮೆ(ವ್ಯಾಕರಣ)ಗಳನ್ನು ಸರಿಯಾಗಿ ಅರಿತು ಅಪ್ಪಟ ಕನ್ನಡದಲ್ಲೇ ಪಾರಿಬಾಶಿಕ ಪದಗಳನ್ನು ಕಟ್ಟುವ ಪ್ರಯೋಗಗಳು ಹಲವು ಗುಂಪುಗಳಲ್ಲಿ ನಡೆಯುತ್ತಿವೆ. ಈ ಪ್ರಯೋಗಗಳಿಂದ ಹೊರಬಂದ ಕೆಲವು ಪದಗಳು ಇಂದು ದಿನಪತ್ರಿಕೆಗಳಲ್ಲೂ ಬಳಕೆಗೆ ಬಂದಿವೆ. ಇಂತಹ ಬೆಳವಣಿಗೆಗಳನ್ನು ಕಂಡಾಗ 'ಕಬ್ಬಿಣದ ಕಡಲೆ'ಯಾಗಿರುವ ಕನ್ನಡ 'ಎಲ್ಲರ ಕನ್ನಡ'ವಾಗುವ ದಿನ ದೂರವಿಲ್ಲವೆಂಬ ತಿಳಿಯಾದ ಸೂಚನೆ ಕಾಣಿಸುತ್ತಿದೆ.

ಗುರುವಾರ, ಅಕ್ಟೋಬರ್ 25, 2012

ಬಾದಾಮಿ - ಬನಶಂಕರಿ

ಬಾದಾಮಿ ಎಂದ ಕೂಡಲೇ ನಮಗೆ ನೆನಪಾಗುವುದು ಚಾಲುಕ್ಯ ಅರಸುಮನೆತನ, ಗವಿ ದೇಗುಲಗಳು ಮತ್ತು ಅಲ್ಲಿನ ಬನಶಂಕರಿಯ ಗುಡಿ. ಒಂದು ಹೊತ್ತಲ್ಲಿ ಇಡೀ ಇಂಡಿಯಾದಲ್ಲೇ ತೀರಾ ಹೆಚ್ಚು ಬಲ ಹೊಂದಿದ ದೊರೆ ಪುಲಿಕೇಶಿಯ ಸಾಮ್ರಾಜ್ಯದ ರಾಜದಾನಿಯಾದ ಇಲ್ಲಿ ಇಂದು ಬರಿಯ ಆ ಮಿರುಗಿನ ಬೆರಗಿನ ಹಿನ್ನಡವಳಿಯ ಕೆಲವು ಕುರುಹುಗಳಶ್ಟೆ ಉಳಿದುಕೊಂಡಿವೆ. ಇರಲಿ, ಈ ಬರಹದ ಗುರಿ ಬಾದಾಮಿಯ ಹೆಸರಿನ ಬೇರನ್ನು ಗಮನಿಸುವುದಾಗಿದೆ.

ಈಗ ಸಾಮಾನ್ಯವಾಗಿರುವ ನಂಬಿಕೆಯೆಂದರೆ ಇದರ ಮೊದಲ ಹೆಸರು 'ವಾತಾಪಿ'ಯಾಗಿದ್ದು, ಹೊತ್ತು ಕಳೆದಂತೆ ಮಂದಿಯ ಬಾಯಲ್ಲಿ ಇದರ ಉಲಿಕೆ ಮಾರ್ಪಾಟು ಹೊಂದಿ 'ಬಾದಾಮಿ'ಯಾಯಿತು ಎಂದು. ಈ ನಂಬಿಕೆಗೆ ಕಾರಣವೂ ಇದೆ. ಹಲವು ಚಾಲುಕ್ಯ ಮತ್ತು ಇನ್ನಿತರೇ ಅರಸು-ಮನೆತನಗಳ ಕಲ್ಬರಹಗಳಲ್ಲಿ ಬಾದಾಮಿಯನ್ನು ವಾತಾಪಿಯೆಂದೇ ಕರೆಯಲಾಗಿದೆ. ಹಾಗಿದ್ದರೆ ವಾತಾಪಿ ಎಂಬ ಹೆಸರಿನ ಬೇರೇನೆಂದು ಕೇಳಿದರೆ ಕೆಲವರು ಈ ಊರು ರಾಮಾಯಣದಲ್ಲಿ ಬರುವ ರಕ್ಕಸ ವಾತಾಪಿಯಿಂದ ಬಂದಿತೆನ್ನುತ್ತಾರೆ. ಈ ವಿಕಿಪೀಡಿಯ ಬರಹದಲ್ಲಿ ಕೂಡ ಇದನ್ನೇ ಬರೆಯಲಾಗಿದೆ.

ಈ ಕತೆಗಳನ್ನು ಒಮ್ಮೆ ಬದಿಗಿಟ್ಟು ಈಗ ಕೆಲ ದಿಟಗಳನ್ನು ಗಮನಿಸೋಣ. ಮೊದಲೇ ಹೇಳಿದಂತೆ ಬಾದಾಮಿಯು ಬನಶಂಕರಿಯ ಗುಡಿಗೆ ಹೆಸರುವಾಸಿ. ಬನಶಂಕರಿ ಯಾವುದೇ ವೇದ-ಪುರಾಣಗಳಲ್ಲಿ ಹೇಳಲಾಗಿರುವ ದೇವತೆಯಲ್ಲ. ಅವಳು ಮಾರಮ್ಮ, ಎಲ್ಲಮ್ಮ, ಕಬ್ಬಾಳಮ್ಮ, ಕೆಂಪಮ್ಮ, ಅಣ್ಣಮ್ಮ ಇದ್ದಂತೆ ನಾಡ ಮಂದಿಯ ದೇವತೆ. ಕರ್ನಾಟಕದ ಹಲವು ಕಡೆ ಈ ದೇವಿಯ ದೇಗುಲಗಳು, ಮೂರ್ತಿಗಳು ಸಿಕ್ಕಿವೆ. ಇವಳ ಮೂಲ ಹೆಸರು 'ಬಾದುಮೆ', 'ಬಾದುಂಬೆ', 'ಬಾದಬ್ಬೆ', 'ಬಾದಮ್ಮ' ಎಂದು. ಈ ಹೆಸರುಗಳು ಹಲವು ಹಳೆಯ ಕಲ್ಬರಹಗಳಲ್ಲದೆ ಹಳೆಯ ಕನ್ನಡದ ಬರಹಗಳಲ್ಲೂ ಬರುತ್ತದೆ. ಎತ್ತುಗೆಗೆ, ಬಸವಣ್ಣರ ಒಂದು ವಚನದಲ್ಲಿ 'ಬಾದುಮೆ'ಯ ಬಗ್ಗೆ ಹೇಳಲಾಗಿದೆ. ಈ ಬಾದುಮೆಯು ನೆಲೆಸಿರುವ ಊರಿಗೆ ಬಾದಾಮಿ ಎಂಬ ಹೆಸರು ಬಂದಿರಬಹುದು. ಇದಕ್ಕೆ ಯಾವುದೇ ನೇರ ಆದಾರಾಗಳಿಲ್ಲದಿದ್ದರೂ ಬಾದುಮೆ-ಬಾದಾಮಿ ಹೆಸರುಗಳ ಹೋಲಿಕೆಯನ್ನು ಗಮನಿಸಿ ಹೆಚ್ಚು ಕಡಿಮೆ ಎಲ್ಲ ಹಿನ್ನಡವಳಿಯರಿಗರೂ ಒಪ್ಪುತ್ತಾರೆ.

ಈ ಹಳೆಯ ಬಾದಾಮಿಯೇ ಸಕ್ಕದಿಸಿದಾಗ ವಾತಾಪಿಯಾಯಿತು. ಮತ್ತು ಸಕ್ಕದವೇ ಎಲ್ಲಕ್ಕೂ ಮೇಲು, ಬೇರು ಎಂಬ ತಪ್ಪು ನಂಬಿಕೆಯಿಂದ, ಹೊತ್ತು ಕಳೆದಂತೆ, ಇದರ ಮೂಲ ಹೆಸರೇ ವಾತಾಪಿ ಎಂಬ ನಂಬಿಕೆ ನೆಲೆಯೂರಿತು. ಬಾದಾಮಿ ಸಕ್ಕದಗೊಂಡು ವಾತಾಪಿಯಾದರೆ ಬಾದುಮೆಯು ಸಕ್ಕದಗೊಂಡು ಬನಶಂಕರಿಯಾದಳು.

ಮಂಗಳವಾರ, ಅಕ್ಟೋಬರ್ 23, 2012

ತಾಯಿ, ತಂದೆ, ತಮ್ಮ, ತಂಗಿ


ಇತ್ತೀಚಿಗೆ ಕನ್ನಡ ಮತ್ತು ಇತರೆ ದ್ರಾವಿಡ ನುಡಿಗಳಲ್ಲಿರುವ 'ತಾಯಿ' ಎಂಬ ಪದ ಸಕ್ಕದದ 'ತೋಯ' - ಅಂದರೆ ಹಾಲು, ತುಪ್ಪ - ಇಂದ ಬಂದಿದೆ ಎಂಬ ವಾದವನ್ನು ಪುಸ್ತಕವೊಂದರಲ್ಲಿ ಓದಿದೆ. ತಾಯಿ ತನ್ನ ಮಗುವಿಗೆ ಹಾಲು ನೀಡುವುದರಿಂದ 'ತೋಯ' ಎಂಬ ಪದವೇ ಮುಂದೆ 'ತಾಯ್' -> 'ತಾಯಿ' ಆಗಿದೆ ಎಂಬುದು ಆ ಬರಹಗಾರರ ವಾದ. ಇದು ನಿಜವೇ ಎಂದು ವಿಚಾರಿಸಲು ಕೊಂಚ ಆಳಕ್ಕೆ ಇಳಿಯೋಣ.

ಕನ್ನಡದಲ್ಲಿ ಆಯ್, ಆಯಿ ಅಂದರೆ ತಾಯಿ, ಅಮ್ಮ ಎಂದು. ಇದು ಇನ್ನೂ ಮರಾಟಿಯಲ್ಲಿ ಬಳಕೆಯಲ್ಲಿದ್ದರೂ ಆಡು ಕನ್ನಡದಲ್ಲಿ ಹೆಚ್ಚು ಕಡಿಮೆ ಇಲ್ಲ ಅಂತಲೇ ಹೇಳಬಹುದು. 'ಆಯಿ' ಎಂಬುದು ಬೇರು ಪದ ಎಂದು ಒಪ್ಪುವುದಾದರೆ ಅದರ ಮುಂದಿರುವ 'ತ' ಎಲ್ಲಿಂದ ಬಂತು ಅನ್ನೋ ಕೇಳ್ವಿ ಏಳುತ್ತದೆ. ಅದಲ್ಲದೆ ಬೇರು ಪದ 'ಆಯಿ' ಎಂಬುದೇ 'ಅಮ್ಮ' ಎಂಬ ಹುರುಳನ್ನು ಹೊಂದಿರುವಾಗ ಈ ಮುಂದಿನ 'ತ'-ಕಾರ ಬಂದು ಅದರ ಅರ್ತ ಮಾರ್ಪಾಟಾಗಿಲ್ಲವೇಕೆ ಎಂಬ ಇನ್ನೊಂದು ಕೇಳ್ವಿ ಮೂಡುತ್ತದೆ.

ಮೊದಲು, 'ತಾಯಿ' ಪದದ ಹಾಗೆಯೇ 'ತ' ಕಾರ ಇರುವ ಇನ್ನೂ ಮೂರು ಪದಗಳನ್ನು ಗಮನಿಸೋಣ. ತಂದೆ, ತಮ್ಮ, ತಂಗಿ. ಈಗ ಒಂದೊಂದಾಗಿ ಇವುಗಳೆಲ್ಲದರ ಮೂಲ ಮತ್ತು ಇತರೆ ರೂಪಗಳನ್ನು ಗಮನಿಸೋಣ:

ತಂದಯ್ = ಅವನ / ಅವರ ತಂದೆ
ನುಂದಯ್ = ನಿನ್ನ ತಂದೆ
ನಂದಯ್ = ನಮ್ಮ ತಂದೆ
ಎಂದಯ್ = ನನ್ನ ತಂದೆ

ತಂಗಯ್ = ಅವನ / ಅವರ ತಂಗಿ
ನುಂಗಯ್ = ನಿನ್ನ ತಂಗಿ
ನಂಗಯ್ = ನಮ್ಮ ತಂಗಿ
ಎಂಗಯ್ = ನನ್ನ ತಂಗಿ

ತಂಬಿ = ಅವನ / ಅವರ ತಮ್ಮ
ನುಂಬಿ = ನಿನ್ನ ತಮ್ಮ 
ನಂಬಿ = ನಮ್ಮ ತಮ್ಮ
ಎಂಬಿ = ನನ್ನ ತಮ್ಮ  

ಇದೇ ತೆರದಲ್ಲಿ ತಾಯಿ ಎಂಬುದು ಅವನ/ ಅವರ ತಾಯಿ ಎಂಬ ಹುರುಳುಳ್ಳದ್ದು.

ತ + ಆಯ್ = ತಾಯ್ -> ತಾಯಿ

ಹಾಗೆಯೇ, ನಾಯ್ (ನಿನ್ನ ತಾಯಿ), ಯಾಯ್ (ನನ್ನ ತಾಯಿ) ಎಂಬ ರೂಪದಗಳು ತಮಿಳಲ್ಲಿ ಬಳಕೆಯಲ್ಲಿದೆ. ಈ ಪದಗಳಲ್ಲಿ 'ತ' ಕಾರವು ತನ್ನ ಮೊದಲ ಅರ್ತವಾದ 'ಅವರು/ ಅವನು' ಎಂಬುದನ್ನು ಈಗ ಕಳೆದುಕೊಂಡಿದೆ. ಹಾಗಾಗಿ ಇಂದು ತಾಯಿ ಎಂದರೆ 'ಅವನ ಅಮ್ಮ' ಎಮ್ಬ ಅರ್ತದ ಬದಲಾಗಿ 'ಅಮ್ಮ' ಎಂಬ ಅರ್ತವಶ್ಟೇ  ಉಳಿದು ಕೊಂಡಿದೆ.